ಸೌಮಿತ್ರ ಖಾನ್ ರವರು ಭಾರತೀಯ ರಾಜಕಾರಣಿಯಾಗಿದ್ದಾರೆ. ಲೋಕಸಭೆಯಲ್ಲಿ ೨೦೧೪ರಿಂದ ಪಶ್ಚಿಮ ಬಂಗಾಳದ ಬಿಷ್ಣುಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಖಾನ್ ರವರು ತಮ್ಮ ವೃತ್ತಿಜೀವನವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಪ್ರಾರಂಭಿಸಿದರು ಮತ್ತು ಕತುಲ್ಪುರ್ ಕ್ಷೇತ್ರದಿಂದ ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾದರು. ೨೦೧೩ರಲ್ಲಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನ್ನು ಸೇರಿದರು. ೨೦೧೪ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಬಿಷ್ಣುಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ೨೦೧೯ರ ಆರಂಭದಲ್ಲಿ ಅವರು ಕೇಂದ್ರದ ಆಡಳಿತ ಪಕ್ಷವಾದ ಭಾರತೀಯ ಜನತಾ ಪಕ್ಷಕ್ಕೆ ಪಕ್ಷಾಂತರಗೊಂಡರು. ಅವರ ಪಕ್ಷಾಂತರದ ನಂತರ, ಉದ್ಯೋಗ ಆಕಾಂಕ್ಷಿಗಳಿಂದ ಹಣವನ್ನು ಸುಲಿಗೆ ಮಾಡಿದ ಆರೋಪದ ಮೇಲೆ, ಅವರ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿತ್ತು. ಕೋಲ್ಕತಾ ಹೈಕೋರ್ಟ್ ಅವರನ್ನು ಕ್ಷೇತ್ರಕ್ಕೆ ಪ್ರವೇಶಿಸದಂತೆ ತಡೆಯಿತು. ಈ ಪ್ರದೇಶದಲ್ಲಿ ಯಾವುದೇ ರಾಜಕೀಯ ರ್ಯಾಲಿಗಳನ್ನು ನಡೆಸದೆ, ಅವರು ೭೮,೦೦೦ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. = ವೈಯಕ್ತಿಕ ಜೀವನ = ಖಾನ್ ಅವರು ಡಿಸೆಂಬರ್ ೮, ೧೯೮೦ರಂದು ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ದುರ್ಲಭಪುರದಲ್ಲಿ ಧನಂಜಯ್ ಖಾನ್ ಮತ್ತು ಛಾಯಾ ರಾಣಿ ಖಾನ್ ದಂಪತಿಗೆ ಜನಿಸಿದರು. ಅವರು ಪಂಚಮುರಾ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. = ರಾಜಕೀಯ ವೃತ್ತಿ = ೨೦೧೧ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಖಾನ್ ಅವರನ್ನು ಕತುಲ್ಪುರ್ ಕ್ಷೇತ್ರದಿಂದ ವಿಧಾನಸಭೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿತು. ೧೬ ಡಿಸೆಂಬರ್ ೨೦೧೩ರಂದು ಅವರು, ರಾಜ್ಯ ಕಾಂಗ್ರೆಸ್ ಘಟಕವು ಬಂಕುರಾ ಜಿಲ್ಲೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ, ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ೨೦೧೪ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಖಾನ್ ರವರು ಬಿಷ್ಣುಪುರ ಕ್ಷೇತ್ರದಿಂದ ೧೬ನೇ ಲೋಕಸಭೆಗೆ ಆಯ್ಕೆಯಾದರು. ೯ ಜನವರಿ ೨೦೧೯ರಂದು ಅವರು, ತೃಣಮೂಲ ಕಾಂಗ್ರೆಸ್‌ನಲ್ಲಿನ "ರಾಜವಂಶದ ಆಡಳಿತ" ಮತ್ತು ರಾಜ್ಯದಲ್ಲಿನ ರಾಜಕೀಯ ಹಿಂಸಾಚಾರಗಳ ಕಾರಣವನ್ನು ನೀಡಿ, ಭಾರತೀಯ ಜನತಾ ಪಕ್ಷಕ್ಕೆ ಪಕ್ಷಾಂತರಗೊಂಡರು. ೨೩ ಮೇ ೨೦೧೯ರಂದು ಅವರು ಭಾರತೀಯ ಜನತಾ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾದರು. = ಉಲ್ಲೇಖಗಳು =